Friday, July 11, 2008

ಒಮ್ಮೆ ಯೋಚಿಸಿ ನೋಡಿ...!


ಈಗ ಕರ್ನಾಟಕದಲ್ಲಿ ನಡೀತಿರೋ ರಾಜಕೀಯ ಬೆಳವಣಿಗೆಗಳನ್ನ ಕಂಡರೆ ಒಂದು ರೀತಿಯ ಭಯ, ಆತಂಕ ಕಾಡ್ತದೆ. ದೇಶದ ಬಗ್ಗೆ ಭವಿಷ್ಯದ ಬಗ್ಗೆ ನಾವೆಷ್ಟೇ ನಿರ್ಲಿಪ್ತರಾಗಿದ್ದರೂ ಮನದ ಯಾವುದೋ ಮೂಲೆಯಲ್ಲಿ ಸಣ್ಣದೊಂದು ದೇಶದ ಬಗ್ಗೆ ಆಸಕ್ತಿ (ಹಂಬಲ) ಅನ್ನೋದು ಇರುತ್ತಲ್ವ. ಹಾಗಾಗಿ ನಮ್ಮ ರಾಜ್ಯದಲ್ಲಿ ನಡೀತಿರೋ ಪೊಲಿಟಿಕಲ್ ಡೆವಲಪ್ಮೆಂಟ್ಸ್ ಬಗ್ಗೆ ಯೋಚಿಸಿದಾಗ ಆತಂಕ ಕಾಡುತ್ತೆ.


ರಾಜಕೀಯ ಅಂದ್ರೇನೇ ರಾಡಿ ಅಂತ ಎಷ್ಟೇ ಸಮಾಧಾವ ಪಟ್ಕೊಂಡ್ರೂ ತೀರಾ ಇಷ್ಟು ಕೊಳೆತು ನಾರುವುದನ್ನ ಸಹಿಸೋದು ಅಂದ್ರೆ ಒಂಥರಾ ಕಸಿವಿಸಿ ಅಲ್ವಾ... ದೇವೇಗೌಡರು ಒಂಥರಾ ರಾಜಕೀಯಕ್ಕೆ ನಾಂದಿ ಹಾಡಿದರೆ ಈ ಬಿಜೆಪಿಯವರದು ಅವರನ್ನೂ ಮೀರಿದ ತಂತ್ರ ಅಂತ ಅನ್ಸುತ್ತೆ. ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಏನೇನೆಲ್ಲಾ ಕಾನೂನು ಮಾಡಿದರೂ ಅದರ ಅಡಿಯಲ್ಲಿ ನುಸುಳುವ ಮಾರ್ಗವನ್ನು ರಾಜಕಾರಣಿಗಳು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ನಮ್ಮ ರಾಜ್ಯದ ಬಿಜೆಪಿ ಮಾದರಿಯಾಗಿದೆ. ಪಕ್ಷಾಂತರಕ್ಕೆ ಹೊಚ್ಚ ಹೊಸತೊಂದು ಭಾಷ್ಯ ಬರೆದಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಯಾವ ಯಾವ ಕುರೂಪ ಪಡೆದುಕೊಳ್ಳಬಹುದು... ಪ್ರಜಾಪ್ರಭುತ್ವದ ಮೂಲ ತಳಪಾಯಕ್ಕೇ ಸಿಡಿಮದ್ದಿಟ್ಟು ಉಡಾಯಿಸಬಹುದು ಎಂಬುದನ್ನ ನೆನೆಸಿಕೊಂಡರೆ ಹೃದಯ ಕಂಪಿಸುತ್ತದೆ ಅಲ್ವಾ..


ಇದುವರೆಗೆ ಚುನಾವಣೆ ಹಣದ ಬಲದಿಂದಲೇ ನಡೆಯುತ್ತಿದೆ ಎಂದು ಗೊತ್ತಿದ್ದರೂ... ಮತದಾರರನ್ನೂ ಸೇರಿಸಿ ಎಲ್ಲವನ್ನೂ ಹಣವೇ ನಿರ್ವಹಿಸುವ ಮಟ್ಟಕ್ಕೆ ಇಳಿದಿರಲಿಲ್ಲ. ಕಳೆದ ಕರ್ನಾಟಕದ ವಿಧಾನ ಸಭಾ ಚುನಾವಣೆ ಅದಕ್ಕೂ ಮುನ್ನುಡಿ ಬರೆಯಿತು. ದುಡ್ಡೊಂದನ್ನು ಹೊರತು ಪಡಿಸಿ ಎಲ್ಲವೂ ಸ್ತಬ್ಥಗೊಂಡಿತ್ತೇನೋ ಎಂಬಷ್ಟರ ಮಟ್ಟಿಗೆ ಹಣದ ಪೆಡಂಭೂತ ಕೇಕೆ ಹಾಕಿ ಕುಣಿದಾಡಿತ್ತು. ಗಣಿಯ ಹಣ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ ಎನಿಸಿದ ಜನಾದೇಶದ ಮೂಲ ಅಸ್ತಿತ್ವವನ್ನೇ ಅಣಕಿಸುವಂತಿತ್ತು. ಮತ ಪಾವಿತ್ರ್ಯತೆಗೆ ಅಪಚಾರ ಎಸಗಿತ್ತು.
ಇನ್ನು ಮುಂದೆ ಅದರ ರೌದ್ರತೆ ಮತ್ತಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳೂ ಈಗಲೇ ಗೋಚರಿಸುತ್ತಿವೆ. ಆಯ್ಕೆಗೊಂಡು ಒಂದೂವರೆ ತಿಂಗಳಲ್ಲೇ ಜನಾದೇಶವನ್ನು ಕಾಲ ಕಸಕ್ಕಿಂತಲೂ ಕೀಳಾಗಿಸಿ ಪುನಃ ಆಯ್ಕೆಗಾಗಿ ಮತ ಭಿಕ್ಷೆಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಈ ವಿಶೇಷ ಪಕ್ಷಾಂತರಿಗಳಿಗೆ ಬೇಕಿರುವುದು ಪ್ರಜ್ಞಾವಂತರ ಮತಗಳಲ್ಲ. ಹಣಕ್ಕಾಗಿ ಮತ ಮಾರಿಕೊಳ್ಳುವವರ ದುರ್ಬಲ ಮತಗಳು. ಎಷ್ಟೇ ಜಾಗೃತಿ ಮೂಡಿಸುವ ಕಾರ್ಯವಾದರೂ ಮತ ಬಿಕರಿಗೇನೂ ನಮ್ಮಲ್ಲಿ ಕೊರತೆ ಇಲ್ಲವಲ್ಲ ಎಂಬುದೇ ಇವರ ಧೈರ್ಯ. ಹೇಗೂ ಕಳೆದ ಚುನಾವಣೆಯಲ್ಲಿ ಗಣಿ ಹಣ ಸುರಿದು ಮತಗಳನ್ನು ಬಾಚಿ ಗುಡ್ಡೆ ಹಾಕಿಕೊಂಡ ಅನುಭವವಿದೆಯಲ್ಲ!


ಇದು ಒಂದು ರೀತಿಯ ವಿಷ ವರ್ತುಲದಂತೆ ವಿಸ್ತಾರಗೊಳ್ಳುತ್ತ ಸಾಗುವ ಅಪಾಯದ ಎಲ್ಲ ಮುನ್ಸೂಚನೆಗಳೂ ಗೋಚರಿಸುತ್ತಿವೆ. ಇದಕ್ಕೆ ಪರಿಹಾರ ಅಷ್ಟು ಸುಲಭ ಅಲ್ಲ. ಅದಕ್ಕಾಗಿ ವಿಶೇಷ ಕಾನೂನನ್ನೇ ರೂಪಿಸುವ ಅನಿವಾರ್ಯತೆ ಇದೆ. ಅಥವಾ ಈಗಿರುವ ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸಬೇಕಿದೆ. ಈಗಿನಂತೆ ರಾಜಕೀಯಕ ಕಾರಣಗಳಿಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಕಾರಣ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದವರಿಗೆ ಪುನಃ ಎರಡು ಟೆರ್ಮ್ ಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹೀಗಾದಲ್ಲಿ ಜನಾದೇಶಕ್ಕೆ ಹಾಗೂ ಪ್ರತಿ ಮತಕ್ಕೂ ಒಂದು ಮೌಲ್ಯ ತಂದು ಕೊಡುವುದು ಸಾಧ್ಯವೇನೋ..?


ಒಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಬಿಗಿಗೊಳಿಸಿ ಜಾರಿಗೆ ತಂದ ಬಿಜೆಪಿ ಪಕ್ಷದಿಂದಲೇ ಅದರ ಅಣಕ ನಡೆದಿರುವುದು ವಿಪರ್ಯಾಸ!


- ಕರಣಂ ರಮೇಶ್
krnmsrk@gmail.com

Thursday, July 10, 2008

ಅಧಿಕೃತ ದರೋಡೆ...

ವಿವಿಧ ಪ್ರಾಯೋಗಿಕ ಅಡ್ಡಿಗಳಿಂದಾಗಿ ಶಾಸಕರ ಮತ್ತು ವಿಧಾನಸಭೆ ಕ್ಷೇತ್ರಗಳ ವಿವರ ಇಲ್ಲಿ ಹಾಕುವುದು ತಡವಾಗುತ್ತಿದೆ. ಆದರೆ, ಯಾಕೋ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಈ ರೀತಿಯ ಯೋಚನೆಗಳಿಗೆ ಅರ್ಥವೇ ಇಲ್ಲವೇನೋ ಅನಿಸುತ್ತಿದೆ. ಇರಲಿ, ಸದ್ಯಕ್ಕೆ ನನ್ನ ತಲೆಯಲ್ಲಿ ಹುಳವಾಗಿ ಕೊರೆಯುತ್ತಿರುವ ವಿಷಯದ ಬಗೆಗೊಂದಿಷ್ಟು ಬರೆಯುತ್ತೇನೆ, ನಿಮ್ಮೆಲ್ಲರ ಅನಿಸಿಕೆಯೇನೆಂದು ತಿಳಿಯುವ ಕುತೂಹಲ ಕೂಡ ನನಗಿದೆ...

++++++++++++++++++++++++++++++

ಗದಗದಲ್ಲಿ ಕಪ್ಪತಗುಡ್ಡವೆಂಬ ಗುಡ್ಡವಿದೆ. ಹೊಸಪೇಟೆಯಿಂದ ಕೊಪ್ಪಳ ಮಾರ್ಗವಾಗಿ ಕಾರವಾರಕ್ಕೆ ಹೋಗುವಾಗ ಈ ಗುಡ್ಡದ ಮೂಲಕವೇ ಹೋಗಬೇಕು. ಗಾಳಿವಿದ್ಯುತ್ ಯೋಜನೆಯೊಂದು ಈ ಗುಡ್ಡದಲ್ಲಿ ಕಾರ್ಯವೆಸಗುತ್ತಿದೆ. ಇದು ಅಮೂಲ್ಯ ಸಸ್ಯಸಂಪತ್ತನ್ನು ಕೂಡ ಹೊಂದಿದೆ. ಅಷ್ಟು ಮಾತ್ರವಲ್ಲ, ಪ್ರತಿ ಅಮಾವಾಸ್ಯೆಗೂ ಇಲ್ಲಿ ಕಾಡ್ಗಿಚ್ಚು ಹಬ್ಬುವುದು ಸಾಮಾನ್ಯವಾಗಿ, ಕೆಲಕಾಲ ಸುದ್ದಿ ಮಾಡಿತ್ತಂತೆ. ಹಿಂದೆ ಕೊಡರಕೊಂಕಿ ಅನ್ನುವ ಹಕ್ಕಿಗಳ ಸಾಮ್ರಾಜ್ಯವಾಗಿದ್ದ ಈ ಗುಡ್ಡದಲ್ಲಿ ಈಗ ಈ ಹಕ್ಕಿಗಳು ಬಹಳ ಕಡಿಮೆಯಾಗಿವೆಯಂತೆ.(ಈ ಹಕ್ಕಿಗಳು ಸುಗ್ಗಿಯ ಕಾಲದಲ್ಲಿ ಬೆಳೆಗಳಿಗೆ ದಾಳಿಯಿಟ್ಟು ಗುಡ್ಡದಲ್ಲಿ ಸಂಗ್ರಹ ಮಾಡುತ್ತಿದ್ದವಂತೆ, ಇವೆಲ್ಲ ನಾನು ಕೇಳಿತಿಳಿದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಯಾರಲ್ಲಾದರೂ ಇದ್ದಲ್ಲಿ ತಿಳಿಯಲು ನಾನು ಕುತೂಹಲಿ)

ಈಗ ಈ ಗುಡ್ಡ ಮತ್ತೆ ಸುದ್ದಿ ಮಾಡಹೊರಟಿದೆ. ಬಲ್ಲ ಮೂಲಗಳ ಪ್ರಕಾರ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭವಾಗುತ್ತಿದೆ. ಇನ್ನು ಮುಂದೆ ಇಲ್ಲಿ ಬುಲ್ ಡೋಜರ್-ಗಳದೇ ಕಾರುಬಾರಂತೆ. ಇನ್ನಷ್ಟು ತಿಳಿದವರು ಹೇಳುವ ಪ್ರಕಾರ ಈ ಗುಡ್ಡದಲ್ಲಿ ಮತ್ತು ಸುತ್ತಮುತ್ತ, ಹಲವು ಲೋಹಗಳ ನಿಕ್ಷೇಪವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿನ್ನದ ನಿಕ್ಷೇಪವಿದೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿಗಳಲ್ಲಿ ಪ್ರಸ್ತಾಪವೂ ಇದೆ.

ಅರಣ್ಯವಿರುವ ಪ್ರದೇಶದಲ್ಲಿ ಗಣಿಗಾರಿಕೆ, ಅರಣ್ಯ ಖಾತೆಯ ಸಹಯೋಗದಿಂದಲೇ ನಡೆಯಬೇಕು. ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ರಾಜಕೀಯ ಲೆಕ್ಕಾಚಾರಗಳಲ್ಲೂ ವ್ಯವಸ್ಥಿತವಾಗಿ ಗಣಿದಣಿಗಳ ಹಿತಾಸಕ್ತಿ ಕಾಪಾಡಿಕೊಳ್ಳಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀರಾಮುಲು... ಖಾತೆ ಮರುಹಂಚಿಕೆಯ ನಂತರ ಅರಣ್ಯಖಾತೆ ಬರಲಿರುವುದು ಜನಾರ್ದನ ರೆಡ್ಡಿಗಂತೆ... ತಮ್ಮ ಕಾರ್ಯಕ್ಕೆ ಯಾರಿಂದಲೂ ತೊಂದರೆ ಬರದಂತೆ ನೋಡಿಕೊಳ್ಳಲು ಉಸ್ತುವಾರಿ ಸಚಿವರಿದ್ದರೆ, ವ್ಯವಸ್ಥಿತವಾಗಿ ಕಾರ್ಯ ಮುಗಿಸಲು ಅರಣ್ಯಖಾತೆಯ ಸಂಪೂರ್ಣ ಸಹಕಾರವಿರುತ್ತದೆ. ಹಾಗೆ, ಇಲ್ಲಿನ ಚಿನ್ನದ ಗಣಿಯ ರಾಷ್ಟ್ರೀಕರಣವಾಗದೆಯೇ, ಚಿನ್ನಕ್ಕಾಗಿ ನಡೆಯುತ್ತಿದೆಯೆಂದು ಅಧಿಕೃತವಾಗಿ ಯಾರಿಗೂ ಗೊತ್ತಾಗದೆಯೇ, ಚಿನ್ನದ ನಿಕ್ಷೇಪಗಳು ಮಾಯವಾಗಲಿವೆ. ಸದ್ಯಕ್ಕೆ ಇದನ್ನು ವಿರೋಧಿಸುವವರೂ ಯಾರೂ ಇಲ್ಲ.

ಗಣಿಗಾರಿಕೆಯೊಂದು ಆಕ್ಟೋಪಸ್ ಇದ್ದಹಾಗೆ... ಎಲ್ಲಾ ಗುಡ್ಡಗಳನ್ನು ಕಡಿದು ಸಸ್ಯಸಂಪತ್ತನ್ನು ನುಂಗಿಹಾಕಿ ಸುತ್ತಲ ಜನರ ಬದುಕನ್ನೇ ಕಿತ್ತುಕೊಂಡು ಮಳೆ-ಬೆಳೆಯಾಗದಂತೆ ಮಾಡಿದರೂ ಇದರ ಹಸಿವು ಇಂಗದು. ಗಣಿಗಾರಿಕೆಗೆ ಸಹ್ಯಾದ್ರಿ, ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಚೆನ್ನಗಿರಿ, ಕಲಘಟಗಿ ಹಾಗೂ ಇನ್ನು ಹಲವಾರು ಊರುಗಳು ಬಲಿಯಾಗಲಿವೆ. ಚಿನ್ನದ ನಿಕ್ಷೇಪವಿದೆಯೆಂದು ಕಂಡುಬಂದ ಧಾರವಾಡದ ಎತ್ತಿನಗುಡ್ಡದ ಮೇಲೂ ಗಣಿಲಾಬಿ ಕಣ್ಣು ಇಷ್ಟರಲ್ಲೇ ಬಿದ್ದಿರುತ್ತದೆ.

ಇದರಿಂದ ಆ ಊರುಗಳಿಗಂತೂ ಏನೇನೂ ಲಾಭವಿಲ್ಲ. ಪರಿಣಾಮ, ಬೆಲೆಬಾಳುವ ಅರಣ್ಯ ಸಂಪತ್ತಿನ ಮತ್ತು ಪ್ರಾಣಿಸಂಪತ್ತಿನ ನಾಶ. ಅದೂ ನಾಗರಿಕರು ಆರಿಸಿ ಕಳುಹಿಸಿದ ಪ್ರತಿನಿಧಿಗಳಿಂದ ತುಂಬಿದ ಸರಕಾರದಿಂದಲೇ. ವ್ಯವಸ್ಥಿತವಾಗಿ, ಮತ್ತು ಅಧಿಕೃತವಾಗಿ. ಏನಂತೀರಿ?

++++++++++++++++

(ಇದರಲ್ಲಿರುವ ಮಾಹಿತಿಗೆ ಪೂರಕವಾಗಿ ಇನ್ನೇನಾದರೂ ಇದ್ದಲ್ಲಿ, ಅಥವಾ ಬೇರೇನಾದರೂ ಮಾಹಿತಿಯಿದ್ದಲ್ಲಿ, ಅದನ್ನು ತಿಳಿಸಬಹುದು. ಬರಿಯ ಮಾಹಿತಿಗಳಿಂದ ಬೇರೇನೂ ಪ್ರಯೋಜನವಾಗದು ಅನ್ನುವುದು ಒಂದು ಮಟ್ಟಿಗೆ ನಿಜವಿರಬಹುದು, ಆದರೂ ಇರ್ಲಿ ಅಂತ ಈ ಬರಹ... ಏನಾದರೂ ಒಳ್ಳೆಯದಾದೀತೇನೋ ಅಂತ ಆಶೆ, ಅಷ್ಟೆ.)