Sunday, August 17, 2008

ಹೊಗೇನಕಲ್ ಬೆನ್ನು ಹತ್ತಿ...


ಹೊಗೇನಕಲ್ - ಭೂಮಿ ಮೇಲೊಂದು ಸ್ವರ್ಗ!

“ನೀ ಮೆಟ್ಟುವ ನೆಲ ಅದೆ ಕರ್ನಾಟಕ, ನೀ ಕುಡಿಯುವ ನೀರ್ ಕಾವೇರೀ...” ಎಂದು ರಾಷ್ಟ್ರಕವಿ ಕುವೆಂಪು ಹಾಡುವಷ್ಟರ ಮಟ್ಟಿಗೆ ಕನ್ನಡತನದೊಡನೆ ನಂಟು ಬೆಳೆಸಿದ್ದಾಳೆ ಕಾವೇರಿ. ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಶ್ರೀರಂಗಂವರೆಗೆ ಹರಿದು ಬಂಗಾಳಕೊಲ್ಲಿಯಲ್ಲಿ ಕಡಲಿನೊಡಲು ಸೇರುವ ಈಕೆ, ಅದಕ್ಕೂ ಮುನ್ನ ಕರ್ನಾಟಕ – ತಮಿಳುನಾಡು - ಕೇರಳ ರಾಜ್ಯಗಳಲ್ಲಿ ಸುಮಾರು 780 ಕಿ.ಮೀ. ದೂರದುದ್ದಕ್ಕೂ ಜೀವದಾಯಿನಿಯಾಗಿ ಹರಿಯುತ್ತಾಳೆ. ಚಿತ್ರ-ವಿಚಿತ್ರವಾಗಿ ಮನಬಂದಂತೆ ಹರಿದು, ದ್ವೀಪಗಳನ್ನು ಸೃಷ್ಟಿಸುತ್ತ, ಜಲಪಾತವಾಗಿ ಧುಮ್ಮಿಕ್ಕುತ್ತ ರಮಣೀಯವಾಗಿ ಕಂಗೊಳಿಸುತ್ತಾಳೆ. ಕಾವೇರಿ ಸೃಷ್ಟಿಸಿದ ಇಂತಹ ರಮಣೀಯ ತಾಣಗಳಲ್ಲಿ ಹೊಗೇನಕಲ್ ಒಂದು.

ಭಾರತದ ನಯಾಗರವೆಂದು ಪ್ರಸಿದ್ಧವಾದ ಹೊಗೆನಕಲ್ ಇರುವುದು ಬೆಂಗಳೂರಿನಿಂದ ಸುಮಾರು 140 ಕಿಲೋಮೀಟರ್ ದೂರದಲ್ಲಿ. ಇಲ್ಲಿ ಇಡೀ ವಿಶ್ವದಲ್ಲಿಯೇ ಪ್ರಾಚೀನವೆನಿಸಿದ ಕಾರ್ಬೋನೇಟ್ ಬಂಡೆಗಳದ್ದೇ ಸಾಮ್ರಾಜ್ಯ. ಸುಮಾರು 20 ಮೀಟರ್ ಎತ್ತರದಿಂದ ನೀರು ಬಂಡೆಗಳ ಮೇಲೆ ಧುಮ್ಮಿಕ್ಕುವಾಗ ಆ ರಭಸಕ್ಕೆ ನೀರಿನ ಹನಿಗಳು ಸತತವಾಗಿ ಮೇಲೆ ಚಿಮ್ಮುತ್ತಿರುತ್ತವೆ. ದೂರದಿಂದ ನೋಡುವಾಗ ಹೊಗೆಯಂತೆ ಇದು ಕಾಣುತ್ತದೆ, ಅದಕ್ಕೇ ಹೊಗೇನಕಲ್ ಎಂಬ ಹೆಸರು ಬಂದಿರಬೇಕು.

ತಮಿಳುನಾಡು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿದೆ. ಇಲ್ಲಿ ತೂಗುಸೇತುವೆ, ವೀಕ್ಷಣಾ ಗೋಪುರ ನಿರ್ಮಿಸಿದೆ. ಅಷ್ಟೇ ಅಲ್ಲ, ತನ್ನ ವೆಬ್-ಸೈಟ್-ಗಳಲ್ಲಿ ಹೊಗೇನಕಲ್ಲನ್ನು ತನ್ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆಂದು ಬಿಂಬಿಸುತ್ತಿದೆ. ಹೊಗೇನಕಲ್-ಗೆ ಹೋಗುವ ಹೆಚ್ಚಿನವರು ತಮಿಳುನಾಡು ಮೂಲಕವೇ ಹೋಗುತ್ತಾರೆ. ಅದೇ ಕರ್ನಾಟಕದ ಭಾಗದಲ್ಲಿ ಏನೇನೂ ಇಲ್ಲ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಎಂದೂ ಹೊಗೇನಕಲ್ಲನ್ನು ತನ್ನದೆಂದು ಹೇಳಿಕೊಂಡ ಉದಾಹರಣೆಯಿಲ್ಲ.

ಹೊಗೇನಕಲ್ ವಿವಾದ...

1998ರಲ್ಲಿ ಕರ್ನಾಟಕ-ತಮಿಳುನಾಡು ಕುಡಿಯುವ ನೀರಿನ ವಿವಾದ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ, ಉಭಯ ರಾಜ್ಯಗಳ ಪ್ರತಿನಿಧಿಗಳ ಸಭೆ ಕರೆದಿತ್ತು. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ ಮೇಕೆದಾಟುವಿನಲ್ಲಿ, ಹಾಗೂ ಧರ್ಮಪುರಿ ಮತ್ತು ಕೃಷ್ಣಗಿರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ ಹೊಗೇನಕಲ್ಲಿನಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಈ ಸಭೆಯಲ್ಲಿ ಬರಲಾಗಿತ್ತು. ಇದಕ್ಕೆ ಉಭಯ ರಾಜ್ಯಗಳೂ ಒಪ್ಪಿಗೆ ಸೂಚಿಸಿದ್ದವು. ಇವೆಲ್ಲದಕ್ಕೂ ಕೇಂದ್ರದ ಅನುಮೋದನೆ ಕೂಡ ದೊರೆತಿತ್ತು. ಆಗ ನಡೆದ ಒಪ್ಪಂದದ ಪ್ರಕಾರ, ತಮಿಳುನಾಡು ಕುಡಿಯುವ ನೀರಿಗೆ ಜಾಕ್ ವೆಲ್ ಅಥವಾ ಏತ ನೀರಾವರಿಯ ಮೂಲಕ ನೀರು ಪಡೆಯಬೇಕು ಎಂದಾಗಿತ್ತು.
2008ರ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ಹೊಗೇನಕಲ್-ನಲ್ಲಿ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ಮಾಡಿತು. ಕನ್ನಡದ ನೆಲದಲ್ಲಿ ಅಣೆಕಟ್ಟು ಕಟ್ಟಿ ಕುಡಿಯುವ ನೀರನ್ನು ತಮಿಳುನಾಡಿಗೆ ಸಾಗಿಸುತ್ತಾರೆಂಬ ಗಾಳಿಮಾತೇ ವಿವಾದಕ್ಕೆ ಕಾರಣವಾಯಿತು.

ಖನ್ನಢದ ಉಟ್ಟು ಓರಾಠಗಾರರೆಲ್ಲ ಖನ್ನಡದ ನೆಲ-ಜಲ ಅಂತ ಹೋರಾಟ ಮಾಡುವಾಗ ರಾಜಕಾರಣಿಗಳು ತೆಪ್ಪಗೆ ಕೂರಲಾದೀತೇ? ಅವರೂ ತಲೆಗೊಂದು ಮಾತಾಡಿದರು. ಚುನಾವಣೆಗೆ ಮುಂಚೆ ಯಡಿಯೂರಪ್ಪ ಹೊಗೇನಕಲ್ಲಿಗೇ ಹೋಗಿ ಸಮೀಕ್ಷೆ ನಡೆಸಿ ಬಂದರು. ಅಲ್ಲಿನ ನಿಜ ಪರಿಸ್ಥಿತಿ ಅವರಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಆ ಸಮಯದ ಅವರ ಹೇಳಿಕೆಗಳು ಮಾತ್ರ ಇರಬೇಕಾದ ಪ್ರಬುದ್ಧ ಮಟ್ಟದಲ್ಲಿ ಇರಲಿಲ್ಲ.

ಕಾರಣಗಳೇನೋ ಗೊತ್ತಿಲ್ಲ, 1998ರಲ್ಲಿ ಅನುಮತಿ ಸಿಕ್ಕರೂ, ತಮಿಳುನಾಡು ಈ ಯೋಜನೆ ಕೈಗೆತ್ತಿಕೊಳ್ಳುವಲ್ಲಿ ತಡವಾಗಿದ್ದಂತೂ ನಿಜ. ಇಷ್ಟರವರೆಗೆ ಇಲ್ಲದ್ದು ಈಗ ಯಾಕೆ ಎಂಬ ಪ್ರಶ್ನೆಗೆ ಈ ವಿಳಂಬ ಕಾರಣವಾಯಿತು. ಆದರೆ, ನಿಜವಾಗಿ ಹೇಳಬೇಕೆಂದರೆ, ಈ ಯೋಜನೆ ಎಲ್ಲಿ ಆಗುತ್ತದೆ, ಯಾವ ರೀತಿ ಮಾಡುತ್ತಾರೆ, ಏನು ಮಾಡುತ್ತಾರೆ ಅಂತೆಲ್ಲ ಸತ್ಯಾನ್ವೇಷಣೆ ಮಾಡಹೊರಟವರು ಇಲ್ಲವೆಂದೇ ಹೇಳಬೇಕು.

ಕುಡಿಯುವ ನೀರು ಯಾಕೆ

ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳಲ್ಲಿನ ಅಂತರ್ಜಲ ಅತ್ಯಧಿಕ ಪ್ರಮಾಣದ ಫ್ಲೋರೈಡ್ ಅಂಶ ಹೊಂದಿದೆ. 1.5 ಗ್ರಾಮಿಗಿಂತ ಅಧಿಕ ಫ್ಲೋರೈಡ್ ಅಂಶವುಳ್ಳ ನೀರು ಸೇವನೆಗೆ ಅರ್ಹವಲ್ಲ, ಆದರೆ ಇಲ್ಲಿನ ಪ್ರತಿ ಲೀಟರ್ ನೀರಿನಲ್ಲಿ 9.0 ಗ್ರಾಂನಷ್ಟು ಫ್ಲೋರೈಡ್ ಅಂಶವಿದೆ.

ನೀರಿನ ವಿಷಯದಲ್ಲಿ ತಮಿಳುನಾಡಿನ ಜನಕ್ಕಿರುವುದು ಪೂಜ್ಯ ಭಾವನೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಅಂಧಾಭಿಮಾನ. ತಾವು ಕುಡಿಯುವ ನೀರಲ್ಲಿ ಫ್ಲೋರೈಡ್ ಇದೆಯೆಂಬುದರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಇವರು, ಈ ನೀರು ಸೇವಿಸುವುದರಿಂದಲೇ ಆರೋಗ್ಯ ಸಮಸ್ಯೆಗಳು ಬರುತ್ತವೆಂದರೆ ನಂಬುವುದಿಲ್ಲ. ನಿನ್ನ ತಾಯನ್ನಾದರೂ ಪರೀಕ್ಷಿಸು, ಆದರೆ ನೀರನ್ನು ಮಾತ್ರ ಪರೀಕ್ಷಿಸುವಂತಿಲ್ಲ ಅನ್ನುತ್ತಾರೆ ತಮಿಳುನಾಡಿನ ಜನ.

ಕೃಷ್ಣಗಿರಿಯ ಊರೊಂದರಲ್ಲಿ ಕಾಲಿಟ್ಟರೆ, ಕಾಣಸಿಗುತ್ತಾರೆ - ಹಲ್ಲು ಹಳದಿಯಾದ, ಸಪೂರವಾದ ಸೊಟ್ಟ ಕಾಲುಗಳ ನೂರಾರು ಜನ. ಮಲ್ಲಿಗೆ ಬೆಳೆಯುತ್ತ ಜೀವನ ಸಾಗಿಸುತ್ತಾರಿವರು. ಈಗಾಗಲೇ ಕೃಷ್ಣಗಿರಿಯ 60%ದಷ್ಟು ಜನ ಫ್ಲೋರೋಸಿಸ್-ಗೆ ಬಲಿಯಾಗಿದ್ದಾರೆ. ಈ ಎರಡು ಜಿಲ್ಲೆಗಳಿಗೆ ಈಗ ಶುದ್ಧ ಕುಡಿಯುವ ನೀರು ನೀಡದಿದ್ದರೆ ಮುಂದಿನ ತಲೆಮಾರೆಲ್ಲ ಫ್ಲೋರೋಸಿಸ್ ಬಾಧೆಗೊಳಗಾಗಬಹುದು. ಶುದ್ಧ ಕುಡಿಯುವ ನೀರು ಈ ಜನರ ಅವಶ್ಯಕತೆ. ಅದನ್ನೊದಗಿಸುವುದು ತಮಿಳುನಾಡು ಸರಕಾರದ ಜವಾಬ್ದಾರಿ.

ಈ ಯೋಜನೆಗೆ ಕರ್ನಾಟಕದ ವಿರೋಧದ ಅಗತ್ಯವಿಲ್ಲ – ಯಾಕೆಂದರೆ,

1) ಸುಪ್ರೀಂಕೋರ್ಟ್ ಹೇಳುವ ಪ್ರಕಾರ, ಕುಡಿಯುವ ನೀರಿನ ಯೋಜನೆಗೆ ನೀರಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಗರಿಷ್ಟ ಆದ್ಯತೆ. ಹಾಗಾಗಿ, ತಾಂತ್ರಿಕವಾಗಿ ತಮಿಳುನಾಡಿಗೆ ಅಡ್ಡಿಯೊಡ್ಡುವ ಹಕ್ಕು ಕರ್ನಾಟಕಕ್ಕಿಲ್ಲ. 30 ಲಕ್ಷ ಜನರಿಗೆ ಕುಡಿಯುವ ನೀರು ದೊರಕಿಸುವ ಈ ಯೋಜನೆಗೆ ಯಾರೂ ಅಡ್ಡಿ ಬರುವಂತಿಲ್ಲ.

2) ಹೊಗೇನಕಲ್ಲಿನಲ್ಲಿ ಮಾಡಹೊರಟಿರುವುದು ಏತ ನೀರಾವರಿ ಯೋಜನೆ. ಅದರಿಂದ 2.1 ಟಿಎಂಸಿ ನೀರು ಮಾತ್ರ ಎತ್ತಿಕೊಳ್ಳಲು ಅನುಮತಿಯಿದೆ. 2021ನೇ ಇಸವಿಯಲ್ಲಿ ದಿನವೊಂದಕ್ಕೆ 128 ಮಿಲಿಯನ್ ಲೀಟರ್ ನೀರು ಎತ್ತಿಕೊಳ್ಳಲು ಅನುಮತಿಯಿದೆ. 1334 ಕೋಟಿ ರೂಪಾಯಿಗಳಲ್ಲಿ ಜಪಾನ್ ಬ್ಯಾಂಕ್ ಸಹಯೋಗದೊಡನೆ ಎರಡು ನೀರು ಶುದ್ಧೀಕರಣ ಘಟಕಗಳನ್ನು ಹಾಕಿಕೊಂಡು ಧರ್ಮಪುರಿ ಮತ್ತು ಕೃಷ್ಣಗಿರಿಗೆ ನೀರು ಒದಗಿಸಲಾಗುತ್ತದೆ

3) ಇಲ್ಲಿಂದ ಎತ್ತಿಕೊಳ್ಳುವ ನೀರು ತಮಿಳುನಾಡಿನ ಪಾಲಿನದೇ ನೀರು. ಈ ಯೋಜನೆಗಾಗಿ ಕರ್ನಾಟಕ ಹೆಚ್ಚಿನ ನೀರನ್ನೇನೂ ಬಿಡುಗಡೆ ಮಾಡಬೇಕಿಲ್ಲ. ಕಾವೇರಿಯಿಂದ ತಮಿಳುನಾಡಿಗೆ ಬಿಡುಗಡೆಯಾಗುವ ನೀರು ಅಧಿಕೃತವಾಗಿ ಬಿಳಿಗುಂಡ್ಲುವಿನಲ್ಲಿ ಅಳತೆಯಾಗುತ್ತದೆ. ಬಿಳಿಗುಂಡ್ಲುವಿನಿಂದ ಬಿಟ್ಟ ನೀರು ಹೊಗೆನಕಲ್ ಮೂಲಕ ಧುಮುಕಿದರೆ ಸೇರುವುದು ನೇರವಾಗಿ ಮೆಟ್ಟೂರು ಅಣೆಕಟ್ಟಿನ ಹಿನ್ನೀರಿಗೆ. ಅದೆಲ್ಲವೂ ತಮಿಳುನಾಡಿನ ಪಾಲಿನದೇ ಆದ್ದರಿಂದ, ಅದು ಕರ್ನಾಟಕದ ನೀರಾಗುವುದಿಲ್ಲ.

4) ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪು ಬರುವವರೆಗೂ ಕರ್ನಾಟಕ ಮೈಸೂರು ಪ್ರಾಂತ್ಯದ ಕಾವೇರಿ ನದಿ ಪಾತ್ರದಲ್ಲಿ ಯಾವುದೇ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಬಾರದೆಂಬುದು ತಮಿಳುನಾಡಿನ ಹಠ. ಒಂದು ವೇಳೆ ಯೋಜನೆ ಕೈಗೊಂಡರೆ ಕಾನೂನು ಪ್ರಕಾರ ತಪ್ಪಾಗುತ್ತದೆ ಎನ್ನುವುದು ಅವರ ವಾದ. ಈ ವಿಚಾರದಲ್ಲಿ ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್-ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಆ ನೀರಿನಲ್ಲಿ ತಮಿಳುನಾಡಿನ ಪಾಲಿರುವ ಕಾರಣ ಈ ವಾದವನ್ನು ಅಲ್ಲಗಳೆಯುವುದು ಕಷ್ಟ. ಆದರೆ ಹೊಗೇನಕಲ್ಲಿನಲ್ಲಿರುವ ನೀರು ತಮಿಳುನಾಡಿನದೇ ಆಗಿರುವುದರಿಂದ ಕರ್ನಾಟಕ ಇದಕ್ಕೆ ಬೇಡವೆನ್ನಲಾಗದು.

ಹಾಗಾದರೆ, ನಿಜವಾದ ವಿವಾದವಿರುವುದು ಎಲ್ಲಿ?

1. ಹೊಗೇನಕಲ್ ವಿವಾದವಿರುವುದು ನೀರಿನ ಹಂಚಿಕೆಯಲ್ಲಲ್ಲ – ನೆಲದ ಹಂಚಿಕೆಯಲ್ಲಿ. ತನ್ನ ಸಮುದ್ರಾಭಿಮುಖ ಯಾನದಲ್ಲಿ ಕಾವೇರಿ 64 ಕಿಲೋಮೀಟರುಗಳಷ್ಟು ದೂರ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಡಿಯಾಗಿ ಹರಿದಿದ್ದಾಳೆ. ಇದರಲ್ಲಿ 40ನೇ ಕಿಲೋಮೀಟರಿನಲ್ಲಿ ಹೊಗೇನಕಲ್ ಇದೆ. ಪ್ರಕೃತಿ ಸೃಷ್ಟಿಸಿದ ಅದ್ಭುತ ವೈಚಿತ್ರ್ಯವಾದ ಹೊಗೇನಕಲ್ ಪ್ರದೇಶದಲ್ಲಿ, ಭೂಭಾಗದ ಸಂರಚನೆಯಲ್ಲಿರುವ ವೈಶಿಷ್ಟ್ಯ ಕೂಡಾ ವಿವಾದಕ್ಕೆ ಒಂದು ರೀತಿಯಲ್ಲಿ ಕಾರಣ. ಇಲ್ಲಿನ ಭೂಭಾಗ ನಡುಗಡ್ಡೆಯ ರೂಪದಲ್ಲಿ ಎದ್ದು ನಿಂತಿದ್ದರೆ, ಕಾವೇರಿ ಇಕ್ಕೆಲಗಳಲ್ಲಿ ಅದನ್ನು ಬಳಸಿ ಹರಿದು ಧುಮುಕಿದ್ದಾಳೆ. ಈ ನಡುಗಡ್ಡೆ ಯಾರಿಗೆ ಸೇರಿದ್ದು ಎಂಬುದಿನ್ನೂ ನಿರ್ಧಾರವಾಗಿಲ್ಲ. ಇಲ್ಲಿ ಸರಿಯಾದ ಗಡಿರೇಖೆ ಗುರುತಿಸುವ ಕಾರ್ಯ ಇನ್ನೂ ಆಗಿಲ್ಲ.

2. ಹೊಗೇನಕಲ್ ಪ್ರದೇಶದಲ್ಲಿ ಕಾವೇರಿ ನದಿಯೇ ಉಭಯ ರಾಜ್ಯಗಳ ನಡುವಿನ ಗಡಿ. ಆದರೆ ನದಿ ಮಧ್ಯಭಾಗದಲ್ಲಿರುವ ಗಡಿರೇಖೆ ಗುರುತಿಸುವಲ್ಲಿಯೂ ವಿವಾದಗಳಿವೆ. ಅಂತಾರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನದಿಯ ಆಳವೇ ಗಡಿರೇಖೆ. ಆದರೆ ಎರಡು ಶತಮಾನಗಳ ಕಾಲ ಭಾರತವನ್ನಾಳಿದ ಬ್ರಿಟಿಷರ ಪ್ರಕಾರ ನದಿಯ ಮಧ್ಯಭಾಗವೇ ಗಡಿರೇಖೆ. ಸ್ವತಂತ್ರ ಭಾರತದಲ್ಲಿ ಯಾವುದನ್ನು ಅನುಸರಿಸಬೇಕು ಎಂಬುದು ಇಂದಿಗೂ ಒಂದು ಸಮಸ್ಯೆ. ಗಡಿ ನಿರ್ಧಾರ ಆಗಿಲ್ಲ ಎನ್ನುವುದು ಮಾತ್ರ ಸತ್ಯ, ಅದೇ ಎಲ್ಲಾ ಸಮಸ್ಯೆಗೂ ಮೂಲಕಾರಣ. ಪರಿಹಾರ, ಕೇಂದ್ರ ಸರ್ಕಾರದ ಮುಂದಾಳತ್ವದಿಂದ ಮಾತ್ರ ಸಾಧ್ಯ.

ವಿವಾದಿತ ಯೋಜನೆಗೆ ಶಿಲಾನ್ಯಾಸ ಮಾಡಿದ ಜಾಗದಲ್ಲಿ ಈಗ ಛಿದ್ರಛಿದ್ರವಾದ ಶಿಲೆ ಮಾತ್ರವಿದೆ. ವಿವಾದ ಭುಗಿಲೆದ್ದ ಕೆಲವೇ ದಿನಗಳಲ್ಲಿ ಅದನ್ನು ತಮಿಳುನಾಡಿನ ಅಧಿಕಾರಿಗಳೇ ಒಡೆಸಿ ಹಾಕಿದ್ದಾರೆ. ಹೊಗೇನಕಲ್-ನಿಂದ ಒಂದು ಕಿಲೋಮೀಟರ್ ಹಿಂದೆ ಎರಡೂ ರಾಜ್ಯಗಳ ಗುಡ್ಡಗಳಲ್ಲಿ ಸೀಮೆಸುಣ್ಣದಲ್ಲಿ ಮಾರ್ಕಿಂಗ್ ಮಾಡಿದ್ದು ಕಾಣಸಿಗುತ್ತದೆ. ಈ ಕಡೆ ಕರ್ನಾಟಕದ ಬೆಟ್ಟದಿಂದ ಆರಂಭವಾದ ಮಾರ್ಕಿಂಗ್ ನದಿ ದಾಟಿ ಆಕಡೆ ತಮಿಳುನಾಡಿನ ಗುಡ್ಡದಲ್ಲಿ ಅಂತ್ಯವಾಗುತ್ತದೆ. ಎರಡು ವರ್ಷಗಳ ಹಿಂದೆ ಕೈಗೊಳ್ಳಬೇಕೆಂದು ಹೊರಟಿದ್ದ ಜಲವಿದ್ಯುತ್ ಯೋಜನೆಗಾಗಿ ಎರಡೂ ರಾಜ್ಯಗಳ ಅಧಿಕಾರಿಗಳು ಸಮೀಕ್ಷೆ ನಡೆಸಿ ಮಾಡಿದ ಮಾರ್ಕಿಂಗ್ ಇದು.
ಜಲವಿದ್ಯುತ್ ಯೋಜನೆ

ಹೊಗೇನಕಲ್ ಕುಡಿಯುವ ನೀರಿನ ಯೋಜನೆಯಿಂದ ಅಂತಹ ಹಾನಿಯೇನಿಲ್ಲ. ಆದರೆ, ಜಲವಿದ್ಯುತ್ ಉತ್ಪಾದನೆ ಯೋಜನೆಯೇನಾದರೂ ಜಾರಿಗೆ ಬಂದರೆ ಮಾತ್ರ ಅದರಿಂದ ಸ್ವಲ್ಪಮಟ್ಟಿಗೆ ತೊಂದರೆಗಳಿವೆ. ವಿದ್ಯುತ್ ಉತ್ಪಾದನೆಗೆ ಕಟ್ಟುವ ಅಣೆಕಟ್ಟಿನ ಹಿನ್ನೀರಿನಿಂದ ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯಪ್ರದೇಶ ಮತ್ತು ಆ ಭಾಗದ ಹಳ್ಳಿಗಳು ಮುಳುಗಡೆಯಾಗುತ್ತವೆ. ಅಲ್ಲಿನ ಜನರು ನಿರಾಶ್ರಿತರಾಗಬೇಕಾಗುತ್ತದೆ. ಜತೆಗೆ ವಿದ್ಯುತ್ ಹಂಚಿಕೆಯ ವಿವಾದಗಳೂ ಹುಟ್ಟಿಕೊಳ್ಳಬಹುದು. ಅಣೆಕಟ್ಟಿನಿಂದಾಗಿ, ನೀರು ಹರಿಯುವುದು ಕಡಿಮೆಯಾಗಿ ಹೊಗೇನಕಲ್ಲಿನ ಜಲಪಾತದ ಪ್ರವಾಸಿ ಆಕರ್ಷಣೆ ಕಡಿಮೆಯಾಗಬಹುದು.

ಆದರೆ, ಈಗ ಪರಿಸ್ಥಿತಿ ಹೇಗಿದೆಯೆಂದರೆ, ಹೊಗೇನಕಲ್ ಬಗ್ಗೆ ಏನೂ ತಿಳಿಯದವರೂ ಕೂಡ ಹೊಗೇನಕಲ್ ಕುರಿತು ಮಾತಾಡುತ್ತಾರೆ. ಹೊಗೆಯಾಡುತ್ತಿರುವ ವಿವಾದವನ್ನ ಬೆಂಕಿಯಾಗಿಸಲು ಯತ್ನಿಸುತ್ತಾರೆ. ಈ ವಿವಾದದ ಹೆಸರಲ್ಲಿ ತಮ್ಮ ಬೇಳೆ ಯಾರ್ಯಾರು ಬೇಯಿಸಿಕೊಳ್ಳುತ್ತಾರೋ ಗೊತ್ತಿಲ್ಲ, ಇದರಿಂದ ಯಾರಿಗೇನು ಲಾಭವೋ ಗೊತ್ತಿಲ್ಲ. ಆದರೆ, ಕರ್ನಾಟಕ ಸರಕಾರಕ್ಕೆ ಮಾತ್ರ ವಿವಾದದ ಬಗೆಗೆ ಸಂಪೂರ್ಣ ಮಾಹಿತಿಯಿದೆ. ತನ್ನ ಮಿತಿಗಳ ಬಗೆಗೆ ಅರಿವು ಕೂಡ ಇದೆ. ಇದಕ್ಕೆ ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿರುವ ಮಾಹಿತಿಗಳೇ ಸಾಕ್ಷಿ. ಹಾಗಾಗಿ, ಕರುಣಾನಿಧಿಯವರ ಹೇಳಿಕೆಗಳಿಗೆ ಪ್ರತಿಯಾಗಿ ಉದ್ರಿಕ್ತ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ ಎಂಬುದು ಇಲ್ಲಿನ ಮಂತ್ರಿಗಳಿಗಂತೂ ಅರಿವಾದಂತಿದೆ.

ಕರ್ನಾಟಕದ ಹೋರಾಟಗಾರರಿರಲಿ, ರಾಜಕಾರಣಿಗಳಿರಲಿ, ಕೊನೆಗೆ ಮಾಧ್ಯಮಗಳೇ ಇರಲಿ - ಎಲ್ಲವನ್ನೂ ವೈಯಕ್ತಿಕ ಹಿತಾಸಕ್ತಿಯ ದೃಷ್ಟಿಯಿಂದ ನೋಡಿ ಲಾಭ ಪಡೆದುಕೊಳ್ಳಲೆತ್ನಿಸುವವರೇ ಇಲ್ಲಿ ಹೆಚ್ಚು. ಹಾಗಾಗಿ ಸತ್ಯಗಳು ಯಾರಿಗೂ ಬೇಕಿಲ್ಲ. ಇವರ ನಡುವೆ ಶ್ರೀಸಾಮಾನ್ಯನಿಗೆ ವಿಷಯಗಳು ಸರಿಯಾಗಿ ಅರ್ಥವಾಗದೆ ಕತ್ತಲಲ್ಲಿರುವಂತಾಗಿದೆ.

1 comment:

ರಾಜೇಶ್ ನಾಯ್ಕ said...

ಶ್ರೀ,
ಉತ್ತಮ ಲೇಖನ. ಬಹಳಷ್ಟು ವಿಷಯಗಳು ತಿಳಿದವು. ಹೊಗೇನಕಲ್ ಬರೀ ಕಾವೇರಿ ನೀರಿನ ವಿಷಯವಾಗಿ ಉಳಿಯದೇ ’ಕರ್ನಾಟಕ-ತಮಿಳುನಾಡು’ ವಿಷಯವಾಗಿ ಮಾರ್ಪಟ್ಟಿದೆ. ಬಿಳಿಗುಂಡ್ಲುವಿನಿಂದ ಹೊರಬಿದ್ದ ನೀರೆಲ್ಲಾ ತಮಿಳುನಾಡಿನ ಪಾಲು ಎಂದು ಒಪ್ಪಿ, ಹೊಗೇನಕಲ್-ನಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು ಕರ್ನಾಟಕ ತಲೆತೂಗಿದರೂ, ಬಿಳಿಗುಂಡ್ಲುವಿನಿಂದ ಈಚೆ ಇರುವ ನೀರೆಲ್ಲಾ (ತಮಿಳುನಾಡಿಗೆ ಬಿಡಬೇಕಾದಷ್ಟು ನೀರನ್ನು ಬಿಟ್ಟು ನಂತರ ಉಳಿದದ್ದು) ಕರ್ನಾಟಕದ್ದು ಎಂದು ತಮಿಳುನಾಡು ಒಪ್ಪಲು ತಯಾರಿದೆಯೇ?

ನಾಗರಿಕ ಚೆನ್ನಾಗಿ ಬರುತ್ತಿದೆ.