Friday, October 24, 2008

ಅಣುಶಕ್ತಿ - ಒಂದಿಷ್ಟು ವಿಚಾರಗಳು... (ಭಾಗ-1)

ಅಣು ಶಕ್ತಿಯ ತಾಂತ್ರಿಕತೆ...

ಅಣುಗಳ ವಿದಳನದಿಂದ ಅಗಾಧ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆಂಬ ಸತ್ಯವನ್ನು ಬಲು ಹಿಂದೆಯೇ ಕಂಡುಹಿಡಿಯಲಾಯಿತು. ಜಗತ್ತು ಈಗಾಗಲೇ ಅಣುಶಕ್ತಿಯನ್ನು ಅವಲಂಬಿಸುತ್ತ ದಾಪುಗಾಲಿಡುತ್ತಿದೆ. ಅಣುಶಕ್ತಿ ಬೇಕು, ಬಾಂಬ್ ಬೇಡವೆನ್ನುವುದು ಕಾಂಗ್ರೆಸ್ ವಿಚಾರಧಾರೆ, ಬಾಂಬ್, ಅಣುಶಕ್ತಿ - ಎರಡೂ ಬೇಕು ಎಂಬುದು ಬಲಪಂಥೀಯರ ಮತ್ತು ಎಡಪಂಥೀಯರ ವಿಚಾರಧಾರೆ - ಹೀಗೆ ಪಕ್ಷಾಧಾರಿತವಾಗಿ ವಿಚಾರಗಳಿಗೂ ಬಣ್ಣ ಬಂದಿದೆ. ಹಾಗಾದರೆ, ಈ ವಾದಗಳಲ್ಲಿ ಸತ್ಯ ಯಾವುದು? ಸರಿ ಯಾವುದು? ದೂರದರ್ಶಿ ವಿಚಾರ ಯಾವುದು?

ತನ್ನ ಕೊನೆಯಿಲ್ಲದ ಬೇಡಿಕೆಗಳ ಪೂರೈಕೆಗೆ ಬೇಕಾದ ಶಕ್ತಿಮೂಲಗಳನ್ನರಸುತ್ತ ಬಲು ದೂರ ಸಾಗಿದ ಮಾನವ, ಇಂದು ಅಣುಶಕ್ತಿ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ. ಅಣುಶಕ್ತಿಯ ತಾಂತ್ರಿಕತೆಯ ಕುರಿತು ಭೌತಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ನಮ್ಮಲ್ಲಿ ಕೆಲವರು ಕಾಲೇಜಿನಲ್ಲಿ ಓದಿರುತ್ತೇವೆ, ಹಾಗೆಯೇ ಮರೆತುಬಿಟ್ಟಿರುತ್ತೇವೆ. ಒಂದು ವೇಳೆ ನೆನಪಿದ್ದರೂ, ಆ ಪ್ರಾಯ ಅಣುಶಕ್ತಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿಶ್ಲೇಷಿಸುವಷ್ಟು ಪ್ರೌಢವಾಗಿರುವುದಿಲ್ಲ, ಹಾಗೂ ಅವಶ್ಯಕತೆಯೂ ಹುಟ್ಟುವುದಿಲ್ಲ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಮಥನ...

ಅಣುವಿದಳನ

ವಿಶ್ವದಲ್ಲಿರುವ ಪ್ರತಿಯೊಂದೂ ವಸ್ತುವೂ ಸೂಕ್ಷ್ಮವಾದ ಅಣುಗಳಿಂದ ಮಾಡಲ್ಪಟ್ಟಿದೆ. ಜೀವ ಇರುವ ಮತ್ತು ಇಲ್ಲದಿರುವ ಚರಾಚರ ಪದಾರ್ಥಗಳು ಅಣುಗಳಿಂದ ರಚಿತವಾಗಿವೆ. ಒಂದು ಅಣು ತನ್ನೊಳಗಿನ ಘಟಕಗಳನ್ನು ಕಳೆದುಕೊಂಡು, ಶಕ್ತಿ ಉತ್ಪಾದಿಸುವ ಕ್ರಿಯೆಯೇ ಅಣುವಿದಳನ. ಹಾಗೆಯೇ ಎರಡು ಅಣುಗಳು ಸೇರಿ ಒಂದಾಗುವ ಪ್ರಕ್ರಿಯೆಯಲ್ಲೂ ಶಕ್ತಿ ಬಿಡುಗಡೆಯಾಗುತ್ತದೆ. ಇದಕ್ಕೆ ಅಣು ಸಮ್ಮಿಳನ ಎನ್ನುತ್ತಾರೆ. ಪರಮಾಣು ಸಮ್ಮಿಳನ ಅಥವಾ ವಿದಳನ ಕ್ರಿಯೆಗಳು ನೈಸರ್ಗಿಕವಾಗಿ ಎಲ್ಲಿಯೂ ಜರುಗುವುದಿಲ್ಲ. ಇದಕ್ಕೆ ನಿಯಂತ್ರಿತ ವಾತಾವರಣ ಮತ್ತು ಸೂಕ್ತ ಜಾಗರೂಕತೆಯ ಅವಶ್ಯಕತೆಯಿದೆ.

ಜಗತ್ತಿನಲ್ಲಿ 117 ಮೂಲವಸ್ತುಗಳು ಇಲ್ಲಿಯವರೆಗೆ ಕಂಡುಹಿಡಿಯಲ್ಪಟ್ಟಿವೆ. ಜಗತ್ತಿನ ಪ್ರತಿಯೊಂದು ವಸ್ತುವೂ ಈ 117 ಮೂಲವಸ್ತುಗಳಲ್ಲಿ ಒಂದಲ್ಲ ಒಂದು ಮೂಲವಸ್ತು, ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಕಾಂಬಿನೇಶನ್-ನಿಂದ ಮಾಡಲ್ಪಟ್ಟಿದೆ... ಸಾಮಾನ್ಯವಾಗಿ ಎಲ್ಲಾ ಮೂಲವಸ್ತುಗಳ ಅಣುಗಳೂ ಸ್ಥಿರ ಸ್ಥಿತಿಯಲ್ಲಿರುತ್ತವೆ. ಆದರೆ ಕೆಲವು ವಿಶಿಷ್ಠ ವಿಧದ ಮೂಲ ವಸ್ತುಗಳಲ್ಲಿ ಅಣುಗಳು ಅಸ್ಥಿರವಾಗಿರುತ್ತವೆ. ಇಂತಹ ಅಸ್ಥಿರ ಅಣುಗಳು ಸ್ಥಿರತೆ ಸಾಧಿಸುವ ಯತ್ನದಲ್ಲಿ ನಿರಂತರ ವಿಕಿರಣ ಕಾರುವ ಗುಣ ಹೊಂದಿರುತ್ತವೆ.

ಇಂತಹ ವಿಕಿರಣಕಾರಕ ಅಣುಗಳಲ್ಲಿ ಆಲ್ಫಾ, ಗಾಮಾ ಮತ್ತು ಬೀಟಾ ಎಂಬ 3 ರೀತಿಯ ವಿಕಿರಣಗಳು ಹೊರಹೊಮ್ಮುತ್ತವೆ. ಈ ಮೂರೂ ವಿಧಗಳು ಮೂಲತಃ ಮಾನವ ಮತ್ತು ಇತರ ಜೀವಿಗಳ ಶರೀರಕ್ಕೆ ಅಪಾಯಕಾರಿಯಾಗಿರುತ್ತವೆ. ಯಾವುದೇ ಒಂದು ವಿಕಿರಣಕಾರಕ ಅಣು ಅಥವಾ ಮೂಲವಸ್ತು, ವಿಭಜನೆ ಹೊಂದಿದಂತೆಲ್ಲಾ ಕ್ಷಯಗೊಳ್ಳುತ್ತಾ ಹೋಗುತ್ತದೆ. ವಿಭಜಿತ ಅಣುವಿನಿಂದ ಸೃಷ್ಟಿಯಾಗುವ ಮರಿ ಅಣುಗಳು ವಿಕಿರಣಗಳನ್ನು ಬಿಡುಗಡೆ ಮಾಡಲೂ ಬಹುದು, ಮಾಡದಿರಲೂ ಬಹುದು.

ಕ್ಷಯವಾಗುವ ಮೂಲಕ ಅಣುಗಳು ಸ್ಥಿರವಾಗುತ್ತಾ ಹೋಗುತ್ತವೆ. ಈರೀತಿ ಕ್ಷಯವಾಗುತ್ತಾ ಮೊದಲಿದ್ದ ದ್ರವ್ಯರಾಶಿಯ ಅರ್ಧದಷ್ಟಾಗಲು ಬೇಕಾಗುವ ಕಾಲಾವಧಿಗೆ ಆ ಮೂಲವಸ್ತುವಿನ ಅರ್ಧಾಯಸ್ಸು ಎನ್ನಲಾಗುತ್ತದೆ. ಆದರೆ ಅಣುಗಳ ಈ ಕ್ರಿಯೆ ಜರುಗಲು ಸಾವಿರಾರು ವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೂ ಈ ಅಣುಗಳು ವಿಕಿರಣಗಳನ್ನು ಸೂಸುತ್ತಿರುತ್ತವೆ. ವಿಕಿರಣಗಳು ಮಾನವ ಶರೀರಕ್ಕೆ ಹಾನಿಕಾರಕವಾಗಿದ್ದು, ಇದರಿಂದಾಗುವ ನಷ್ಟ ಭರಿಸಲಾಗದಂತಹುದು.


ಯುರೇನಿಯಂ ಎಂಬ ಅಣುಶಕ್ತಿ ಇಂಧನ

ಸಾಮಾನ್ಯವಾಗಿ ಅಣು ಸ್ಥಾವರಗಳಲ್ಲಿ ಶಕ್ತಿ ಉತ್ಪಾದಿಸಲು ಬಳಸುವ ಮೂಲವಸ್ತು ಯುರೇನಿಯಂ ಆಗಿರುತ್ತದೆ. ಯುರೇನಿಯಂ ಮೂಲವಸ್ತುವಿನಲ್ಲಿ, ಯುರೇನಿಯಂ-238 ಮತ್ತು ಯುರೇನಿಯಂ-235 ಎಂಬ ಎರಡು ವಿಧಗಳಿರುತ್ತವೆ. ಯುರೇನಿಯಂ ಅದಿರಿನಲ್ಲಿ ಯುರೇನಿಯಂ-238 ವಿಪುಲವಾಗಿರುತ್ತದೆಯಾದರೂ ಅದನ್ನು ವಿಭಜಿಸಲು ಅಪಾರ ಶಕ್ತಿ ಬೇಕು. ಹಾಗಾಗಿ ಅದನ್ನು ನೇರವಾಗಿ ವಿದಳನ ಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ. ಆದರೆ, ಯುರೇನಿಯಂ-235 ಐಸೋಟೋಪ್ ಬಹಳ ಕಡಿಮೆ ಶಕ್ತಿ ಉಪಯೋಗಿಸಿಕೊಂಡು ಸುಲಭವಾಗಿ ವಿದಳನ ಹೊಂದುತ್ತದೆ. ಹಾಗಾಗಿ ಅಣು ಸ್ಥಾವರಗಳಲ್ಲಿ ಮಾಡುವ ವಿದಳನ ಪ್ರಕ್ರಿಯೆಗೆ ಯುರೇನಿಯಂ-235 ಎಂಬ ವಿಧ ಅಗತ್ಯವಾಗಿರುತ್ತದೆ. ಆದರೆ ನೈಸರ್ಗಿಕ ಅದಿರಿನಲ್ಲಿ ಇದರ ಪ್ರಮಾಣ ಕಡಿಮೆಯಿರುತ್ತದೆ. ಹಾಗಾಗಿ ಯುರೇನಿಯಂ-235 ಪಡೆಯಲು ಅದಿರನ್ನು ಪರಿಷ್ಕರಿಸಬೇಕಾಗುತ್ತದೆ.

ಯುರೇನಿಯಂ-235 ಅಣುವನ್ನು ವಿದಳನಕ್ಕೊಳಪಡಿಸಿದಾಗ ಅದು ಎರಡು ಭಾಗಗಳಾಗಿ ವಿಭಜನೆ ಹೊಂದುತ್ತದೆ. ಈ ಎರಡು ಮರಿ ಅಣುಗಳ ಒಟ್ಟು ತೂಕ, ಮತ್ತು ಮೂಲ ಯುರೇನಿಯಂ ಅಣುವಿನ ತೂಕದಲ್ಲಿರುವ ವ್ಯತ್ಯಾಸವೇ ಶಕ್ತಿಯಾಗಿ ಮಾರ್ಪಟ್ಟು ಹೊರಹೊಮ್ಮುತ್ತದೆ. ಈ ಮೂಲತತ್ವವನ್ನು ವಿಜ್ಞಾನಿ ಐನ್ ಸ್ಟೈನ್ ತಮ್ಮ E=MC2 ಎಂಬ ಸೂತ್ರದಲ್ಲಿ ಹೇಳಿದ್ದಾರೆ. ಒಂದು ಗ್ರಾಮ್ ದ್ರವ್ಯರಾಶಿಯಷ್ಟು ಯರೇನಿಯಂನ್ನು ವಿಭಜಿಸಿ ಶಕ್ತಿಯನ್ನಾಗಿ ಪರಿವರ್ತಿಸಿದಾಗ ನೂರಾರು ಕಿಲೋ ಕಲ್ಲಿದ್ದಿಲು ಉರಿಸಿದಾಗ ಸಿಗುವ ಶಕ್ತಿಗೆ ಸಮವಾಗಿರುತ್ತದೆ.

ಸರಪಳಿ ಕ್ರಿಯೆ

ಅಣು ಸ್ಥಾವರಗಳಲ್ಲಿ ಅಣುಶಕ್ತಿಯನ್ನು ಪಡೆಯಲು ಅಣುಗಳ ಸರಪಳಿ ಕ್ರಿಯೆ, ಅಥವಾ ಚೈನ್ ರಿಯಾಕ್ಷನ್- ನಡೆಸಲಾಗುತ್ತದೆ. ಚೈನ್ ರಿಯಾಕ್ಷನ್-ನಲ್ಲಿ ಯುರೇನಿಯಂ 235ರ ಅಣುವಿನಿಂದ ಬಿಡುಗಡೆಯಾದ ನ್ಯೂಟ್ರಾನ್ ಇನ್ನೊಂದು ಯುರೇನಿಯಂ-235ರ ಅಣುವಿಗೆ ಹೊಡೆದು ಅದನ್ನು ವಿದಳನಗೊಳಿಸುತ್ತದೆ, ಈ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರಾನ್ ಮತ್ತೊಂದು ಅಣುವನ್ನು ವಿದಳನಗೊಳಿಸುತ್ತದೆ, ಹೀಗೆ ನಿರಂತರವಾಗಿ ಮುಂದುವರಿಯುವ ಕಾರಣ ಇದಕ್ಕೆ ಸರಪಣಿ ಕ್ರಿಯೆ ಎಂಬ ಹೆಸರು. ಈ ಸರಪಳಿ ಕ್ರಿಯೆಯು ಯುರೇನಿಯಂ-235 ಅಣು ವಿಧದಲ್ಲಿ ನಿರಂತರವಾಗಿ ನಡೆಯುತ್ತದೆ. ಆಗ ಆಗಾಧ ಪ್ರಮಾಣದಲ್ಲಿ ಶಕ್ತಿ ಬಿಡುಗಡೆ ಆಗುತ್ತದೆ. ಆದರೆ ಯು-238ನಲ್ಲಿ ನಿರಂತರ ಸರಪಳಿ ಕ್ರಿಯೆ ಸಾಧ್ಯವಿಲ್ಲ. ಈ ಕಾರಣದಿಂದಲೇ ಯು-235 ಅನ್ನು ಅಣ್ವಸ್ತ್ರಗಳ ಹಾಗೂ ಅಣುಬಾಂಬ್ ಗಳ ತಯಾರಿಕೆಯಲ್ಲಿ ಮತ್ತು ಅಣು ಸ್ಥಾವರಗಳಲ್ಲಿ ಶಕ್ತಿ ಉತ್ಪಾದಿಸಲು ಬಳಸುತ್ತಾರೆ.

ಸರಪಳಿ ಕ್ರಿಯೆಯಿಂದ ಅಗಾಧ ಪ್ರಮಾಣದಲ್ಲಿ ಶಕ್ತಿ ಬಿಡುಗಡೆ ಆಗುತ್ತದೆ. ಬಾಂಬುಗಳಲ್ಲಿ ಈ ಕ್ರಿಯೆ ನಿರಂತರವಾಗಿ ಮತ್ತು ತಡೆರಹಿತವಾಗಿ ನಡೆಯುತ್ತದೆ. ಆದರೆ, ಅಣು ಸ್ಥಾವರಗಳಲ್ಲಿ ನಡೆಸುವ ಸರಪಳಿ ಕ್ರಿಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಅಣು ಸ್ಥಾವರಗಳಲ್ಲಿ ಸರಪಳಿ ಕ್ರಿಯೆಯನ್ನು ನಿಯಂತ್ರಿಸಲು ಹಲವು ರೀತಿಗಳನ್ನು ಅನುಸರಿಸಲಾಗುತ್ತದೆ. ಕ್ಯಾಡ್ಮಿಯಂನ ನಿಯಂತ್ರಣ ಕೊಳವೆಯನ್ನು ಸ್ಥಾವರದೊಳಗೆ ನುಗ್ಗಿಸಿ, ಹೆಚ್ಚಾದ ನ್ಯೂಟ್ರಾನುಗಳನ್ನು ಅದು ಹೀರಿಕೊಳ್ಳುವಂತೆ ಮಾಡಲಾಗುತ್ತದೆ, ಆ ಮೂಲಕ ಸ್ಫೋಟವಾಗದಂತೆ ತಡೆಯಲಾಗುತ್ತದೆ.

ಅಣು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯಾಗಬೇಕೆಂದರೆ, ಸರಪಳಿ ಕ್ರಿಯೆ ನಡೆಯುತ್ತಲೇ ಇರಬೇಕು. ಇದರಿಂದ ಸ್ಥಾವರದ ಒಳಗೆಲ್ಲಾ ಅತ್ಯಧಿಕ ಶಾಖ ಉತ್ಪನ್ನ ಆಗುತ್ತಿರುತ್ತದೆ. ಈ ಶಾಖವನ್ನು ನಿಯಂತ್ರಿಸಲೆಂದು, ತಣ್ಣೀರನ್ನು ನಿರಂತರವಾಗಿ ಸ್ಥಾವರದ ಸುತ್ತ ಹಾಯಿಸಲಾಗುತ್ತದೆ. ಈ ನೀರಿನ ನಿರಂತರ ಪೂರೈಕೆಯೇನಾದರೂ ಕೈಕೊಟ್ಟಲ್ಲಿ ಶಾಖ ಹೆಚ್ಚಿ ವೈಪರೀತ್ಯಗಳು ಉಂಟಾಗಬಹುದು, ಇದು ಸ್ಥಾವರದ ಗೋಪುರ ಕರಗುವ ವರೆಗೂ ಬರಬಹುದು.

ಅಣುಸ್ಥಾವರವೆಂದರೆ ನಿಯಂತ್ರಿತ ಬಾಂಬ್...!

ಬಹಳ ಸಣ್ಣ ಪ್ರಮಾಣದ ಮೂಲವಸ್ತುವನ್ನು ಶಕ್ತಿಯಾಗಿ ಪರಿವರ್ತಿಸಿದಾಗಲೂ ಅದರಿಂದ ಉಂಟಾಗುವ ಶಕ್ತಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಮೊದಲು ವಿಭಜನೆಗೊಂಡ ಅಣು ಎರಡು ಭಾಗವಾಗಿ ಒಡೆಯುತ್ತದೆ. ಆಗ ಇವಗಳ ನಡುವಿನ ಸ್ವಲ್ಪ ದ್ರವ್ಯರಾಶಿ ಕಣ್ಮರೆಯಾಗುತ್ತದೆ. ಈ ಕಣ್ಮರೆಯಾದ ದ್ರವ್ಯರಾಶಿಯೇ ಪರಮಾಣು ಶಕ್ತಿಯಾಗಿ ಮಾರ್ಪಡುತ್ತದೆ. ಈ ಕ್ರಿಯೆಯನ್ನು ನಿಯಂತ್ರಿಸಿದರೆ ಅಣುಶಕ್ತಿಯಾಗುತ್ತದೆ, ನಿಯಂತ್ರಿಸದಿದ್ದರೆ ಬಾಂಬ್ ಆಗುತ್ತದೆ.

ಅಣು ಬಾಂಬ್ ಇರಲಿ, ಅಣು ಶಕ್ತಿಯಿರಲಿ, ಅದಕ್ಕೆ ಉಪಯೋಗವಾಗುವ ಇಂಧನ ವಿಕಿರಣಶೀಲವಾಗಿರಲೇಬೇಕು. ಇವುಗಳೆಂದರೆ ಆಗಾಧ ಪ್ರಮಾಣದ ಅದಿರಿನಲ್ಲಿ ಯುರೇನಿಯಂ-235ನ್ನು ತೆಗೆದು ಬೇರ್ಪಡಿಸಿ ಅದನ್ನು ಶಕ್ತಿ ಉತ್ಪಾದನೆಗೆ ಉಪಯೋಗಿಸಬೇಕು. ಮಾಮೂಲಾಗಿ ವಿಕಿರಣ ಸಾಮರ್ಥ್ಯ ಹೊಂದಿರುವಂತಹ ಮೂಲವಸ್ತುಗಳ ವಿಧಗಳೆಂದರೆ, ಯುರೇನಿಯಂ 238, ಯುರೇನಿಯಂ 235, ಪ್ಲುಟೋನಿಯಂ 239 ಮತ್ತು ಯುರೇನಿಯಂ 233.

ಯುರೇನಿಯಂ-233 ಎಂಬ ಯುರೇನಿಯಂನ ವಿಧವೂ ವಿಕಿರಣಶೀಲವಾಗಿದ್ದು ಇದರಿಂದ ಅಣುಶಕ್ತಿ ಉತ್ಪಾದಿಸಬಹುದು. ಆದರೆ ಇದು ಸ್ವಾಭಾವಿಕವಾಗಿ ಸಿಗುವುದಿಲ್ಲ. ಇದನ್ನು ತಯಾರಿಸಲು ಸಮುದ್ರ ತೀರದಲ್ಲಿ ಹೇರಳವಾಗಿ ಸಿಗುವ ಥೋರಿಯಂ ಬೇಕು. ಈ ಅಂಶವೇ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ ಸೇರಿದಂತೆ ಹಲವು ವಿಜ್ಞಾನಿಗಳು ಥೋರಿಯಂ ಉಪಯೋಗದ ಮೇಲೆ ಹೆಚ್ಚು ಸಂಶೋಧನೆ ನಡೆಯಬೇಕು ಎಂದು ಹೇಳಲು ಕಾರಣ. ಥೋರಿಯಂನಿಂದ ಯುರೇನಿಯಂ-233 ಉತ್ಪಾದಿಸುವ ತಂತ್ರಜ್ಞಾನದ ಸಂಶೋಧನೆ ಭಾರತದ ವಿಜ್ಞಾನಿಗಳೆದುರಿಗೆ ಇಂದು ಇರುವ ಸವಾಲಾಗಿದೆ.

ಅಣು ರಿಯಾಕ್ಟರ್-ನಲ್ಲಿ ಯುರೇನಿಯಂ-235 ವಿಭಜನೆಯಾಗುವಾಗ ಅದರಿಂದ ಬಿಡುಗಡೆಯಾಗುವ ನ್ಯೂಟ್ರಾನುಗಳು, ಅದರಲ್ಲಿರುವ ಯುರೇನಿಯಂ-238ರೊಡನೆ ಸೇರಿಕೊಂಡು ಪ್ಲುಟೋನಿಯಂ-239 ಹುಟ್ಟಿಕೊಳ್ಳುತ್ತದೆ. ಪ್ಲುಟೋನಿಯಂ-239 ಬಲುಬೇಗನೇ ವಿದಳನವಾಗುತ್ತದೆ, ಅಲ್ಲದೆ ಅಪಾರ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗಾಗಿ ಇದು ಬಾಂಬ್ ತಯಾರಿಸಲು ಹೇಳಿ ಮಾಡಿಸಿದ ಮೂಲವಸ್ತು. ಯಾವುದೇ ರಾಷ್ಟ್ರವಾಗಲಿ, ಬಾಂಬ್ ತಯಾರಿಸಬೇಕಾದರೆ ಪ್ಲುಟೋನಿಯಂ-239 ಬೇಕು. ಆದರೆ ಪ್ಲುಟೋನಿಯಂ-239 ಪ್ರತ್ಯೇಕವಾಗಿ ತಯಾರಿಸುವ ಪ್ರಕ್ರಿಯೆ ಹೆಚ್ಚು ವೆಚ್ಚದಾಯಕವಾದ ಕಾರಣ, ಅಣುಶಕ್ತಿ ಉತ್ಪಾದಿಸುವಾಗ ಉಪಉತ್ಪನ್ನವಾಗಿ ಪ್ಲುಟೋನಿಯಂ-239 ಉತ್ಪಾದನೆಯಾಗುತ್ತದೆ, ಇದನ್ನು ಬಾಂಬ್ ತಯಾರಿಕೆಗೆ ಉಪಯೋಗಿಸುವುದು ECONOMICALLY WORKOUT ಆಗುತ್ತದೆ.

ಕೆಡಿಸಿದ ಮೇಲೆ ಬುದ್ಧಿ ಕಲಿತ ಅಮೆರಿಕಾ?

ಇವೆಲ್ಲ ಕಾರಣದಿಂದಾಗಿ, ಅಣುಶಕ್ತಿ ಎಲ್ಲೆಲ್ಲಿ ಉತ್ಪಾದನೆಯಾಗುತ್ತದೋ ಅಲ್ಲಿ ಬಾಂಬ್-ಗೆ ಬೇಕಾದ ಕಚ್ಚಾವಸ್ತು ಕೂಡ ಉತ್ಪತ್ತಿಯಾಗುತ್ತದೆಂಬುದು ವಿಶ್ವದೆಲ್ಲೆಡೆ ಗೊತ್ತಿರುವ ಸತ್ಯ. ಅಣುಶಕ್ತಿ ಸ್ಥಾವರವಿದ್ದಲ್ಲಿ ಬಾಂಬ್ ತಯಾರಿಸುವ ಇಚ್ಛೆಯಿರುವವರಿಗೆ ಸುಲಭವಾಗುತ್ತದೆ. ಯಾವುದೇ ರಾಷ್ಟ್ರ ಅಣುಶಕ್ತಿಯನ್ನು ಉತ್ಪಾದಿಸುತ್ತದೆಂದಾದರೆ, ಅದಕ್ಕೆ ಅಣುಬಾಂಬ್ ತಯಾರಿಸುವ ಎಲ್ಲಾ ಸಾಮರ್ಥ್ಯವಿರುತ್ತದೆ. ಮತ್ತು ಅಗತ್ಯವಾದ ವಸ್ತುಗಳು ಅದರ ನಿಲುಕಿನಲ್ಲೇ ಇರುತ್ತವೆಂದು ಅರ್ಥ.

ಜಾಗತಿಕ ಭಯೋತ್ಪಾದನೆ ಮತ್ತು PARTY-SPONSORED TERRORISM ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಅಣುಬಾಂಬ್ ತಯಾರಿಸಲು ಬೇಕಾದ ಕಚ್ಚಾವಸ್ತುಗಳು ಆಕಸ್ಮಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಭಯೋತ್ಪಾದಕರಿಗೆ ದೊರೆಯುವಂತಾದರೆ, ಅಣುಬಾಂಬ್ ತಯಾರಿಸಲು ಕಷ್ಟವಿಲ್ಲ. ಅದರ ಪರಿಣಾಮ ನಿರಂತರ ಹಾನಿಯುಂಟಾಗಬಹುದು.

ಇಷ್ಟೆಲ್ಲಾ ಆಗದೇ ಇದ್ದರೂ, ಅಣು ಸ್ಥಾವರಗಳಲ್ಲಿ, ಅಥವಾ ಅಣು ಬಾಂಬ್ ಇದ್ದಲ್ಲಿ ಆಕಸ್ಮಿಕವಾಗಿ ಬೇರೆ ರೀತಿಯ ಸ್ಫೋಟಗಳಾದರೂ ಅದು ಸರ್ವನಾಶಕ್ಕೆ ಕಾರಣವಾಗಬಹುದು. ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಪರಿಣಾಮದ ಬಗೆಗೆ ಯೋಚಿಸದೆ ಅವನ್ನು ಪ್ರಯೋಗಿಸುವ ದಿನ ಬಂದರಂತೂ, ಅಪಾಯ ಕಟ್ಟಿಟ್ಟ ಬುತ್ತಿ. ಮಾಮೂಲು ಬಾಂಬಿನಂತೆ ಅಣುಬಾಂಬನ್ನು ಡಿಫ್ಯೂಸ್ ಮಾಡಲಾಗುವುದಿಲ್ಲ, ಹಾಗಾಗಿ ಒಂದು ಬಾರಿ ಒಂದು ಬಾಂಬ್ ಸಿದ್ಧವಾಯಿತೆಂದರೆ, ಅದನ್ನು ಸಿಡಿಸುವುದೇ ಅದರ ನಾಶಕ್ಕಿರುವ ದಾರಿ. (ಬೇರೇನಾದರೂ ದಾರಿ ಇದೆಯಾ ಅನ್ನುವುದು ನನ್ನ ಗಮನಕ್ಕೆ ಬಂದಿಲ್ಲ, ಬಂದಿದ್ದರೆ ದಯವಿಟ್ಟು ತಿಳಿಸಿ)

ಎರಡು ಸಾರಿ ಜಪಾನ್ ಮೇಲೆ ಅಣುಬಾಂಬ್ ಸಿಡಿಸಿ ಚರಿತ್ರೆಯ ಕರಾಳಪುಟಗಳಲ್ಲಿ ಸ್ಥಾನಪಡೆದ ಅಮೆರಿಕಾ, ವಿಮಾನದಾಳಿಯ ಮೂಲಕ ಒಂದುಸಾರಿ ಜಾಗತಿಕ ಭಯೋತ್ಪಾದನೆಗೂ ಬಲಿಯಾಗಿದೆ. ಯಾವ ದೇಶವನ್ನೂ ಕಡಿಮೆಯೆಂದು ತಿಳಿದುಕೊಳ್ಳದೆ ಬೇಹುಗಾರಿಕೆ ನಡೆಸುತ್ತಲೇ ಇರುವ ಅಮೆರಿಕಾ ತನ್ನ ಹಾಗೆ ಬೇರ್ಯಾರೂ ಮಾಡಬಾರದೆಂದು ಮುನ್ನೆಚ್ಚರಿಕೆ ವಹಿಸುತ್ತಿದೆ. ಇದಕ್ಕಾಗಿಯೇ, ಭಾರತ ಅಮೆರಿಕಾದೊಡನೆ ಸಹಿ ಹಾಕಿರುವ 1-2-3 ನಾಗರಿಕ ಅಣು ಒಪ್ಪಂದದಲ್ಲಿ, ಅಣುಶಕ್ತಿ ಉತ್ಪಾದಿಸುವ ರಿಯಾಕ್ಟರುಗಳು ಅಂತಾರಾಷ್ಟ್ರೀಯ ವೀಕ್ಷಕರ ವೀಕ್ಷಣೆಗೆ ತೆರೆದುಕೊಳ್ಳಲು ಬದ್ಧವಾಗಿರಬೇಕೆಂಬ ನಿಯಮವನ್ನು ಇಡಲಾಗಿದೆ. ಜತೆಗೆ, ಪೂರೈಕೆಯಾಗುವ ಯುರೇನಿಯಂನ ಪ್ರತಿ ಗ್ರಾಂಗೂ ಲೆಕ್ಕ ಕೊಡಬೇಕಾಗುತ್ತದೆ. ಈ ಮೂಲಕ ಅಲ್ಲಿ ಅಣುಶಕ್ತಿ ಮಾತ್ರ ಉತ್ಪಾದನೆಯಾಗುವಂತೆ ನೋಡಿಕೊಳ್ಳುವುದು, ಅಣುಬಾಂಬ್ ಸಂಬಂಧಿತ ಕೆಲಸಕಾರ್ಯಗಳು, ಕಚ್ಚಾವಸ್ತುವಿನ ಸಂಗ್ರಹಣೆ ಇತ್ಯಾದಿ ನಡೆಯದಂತೆ ನೋಡಿಕೊಳ್ಳುವುದು ಈ ನಿಯಮದ ಗುರಿಯಾಗಿದೆ. (ಈ ನಿಯಮಗಳನ್ನೆಲ್ಲ ಅಮೆರಿಕಾ ಎಷ್ಟು ಗುಟ್ಟಾಗಿ ಇಟ್ಟಿದೆಯೆಂದರೆ, ಗೂಗಲ್-ನಲ್ಲಿ ಹುಡುಕಿದರೂ ಇವೆಲ್ಲ ಸಿಗುವುದಿಲ್ಲ) ಒಂದು ವೇಳೆ ನಿಯಮ ಮೀರಿ ಅಣ್ವಸ್ತ್ರವನ್ನು ತಯಾರಿಸಿದರೆ ಅಥವಾ ಪರೀಕ್ಷೆಗಳನ್ನು ನಡೆಸಿದರೆ, ಅಣು ಇಂಧನ ಪೂರೈಕೆ ರಾಷ್ಟ್ರಗಳಿಂದ ಭಾರತಕ್ಕೆ ಸಿಗುವ ಯುರೇನಿಯಂ ಪೂರೈಕೆ ನಿಂತು ಹೋಗಿ, ಭಾರತ ಕಾಣುತ್ತಿರುವ 35 ಶೇಕಡಾ ಅಣುಶಕ್ತಿಯ ಕನಸು ಭಗ್ನವಾಗುತ್ತದೆ.

ಮನುಕುಲ ಮರೆತಿದೆಯೇ ಅನುಭವದ ಕಹಿಪಾಠ?

ಇಂದು ಅಮೆರಿಕಾ ಏನೇ ಮಾಡಲಿ, 1945ರಲ್ಲಿ ಅದು ಜಪಾನ್ ಮೇಲೆ ಮಾಡಿದ ಅಣುಬಾಂಬ್ ದಾಳಿಯ ಪರಿಣಾಮ ಇಂದು ಕೂಡ ಜಪಾನ್ ಜನತೆ ಅನುಭವಿಸುತ್ತಿದೆ. ಅಂಗವಿಕಲತೆಯಿಂದ, ಬುದ್ಧಿಮಾಂದ್ಯತೆಯಿಂದ, ದೈಹಿಕ ವೈಪರೀತ್ಯಗಳಿಂದ ಹುಟ್ಟಿದ ಪೀಳಿಗೆ 'ಹಿಬಾಕುಶಾ' ಅಮೆರಿಕಾದ ಕ್ರೌರ್ಯಕ್ಕೆ ಇಂದಿಗೂ ಸಾಕ್ಷಿ ಹೇಳುತ್ತಿದೆ. ಇಂದು ಕೂಡ, ಜಾಗತಿಕ ಸ್ಥಿತಿಗತಿಯನ್ನು ಅವಲೋಕಿಸಿದರೆ, ಪರಿಸ್ಥಿತಿ ಅಣುಬಾಂಬ್ ಸಿಡಿಸುವಷ್ಟು ಮೂರ್ಖರಾಷ್ಟ್ರಗಳು ಇಲ್ಲವೆಂದು ಹೇಳುವಷ್ಟೇನೂ ಸುಂದರವಾಗಿಲ್ಲ.

ಭಾರತದಲ್ಲೂ ಎಲ್ಲಾ ಅಣುಸ್ಥಾವರಗಳಿಗೂ ಅಣು ಒಪ್ಪಂದ ಅನ್ವಯವಾಗುವುದಿಲ್ಲವಾದ್ದರಿಂದ, ಈಗಲೂ ಭಾರತ ತನ್ನದೇ ಯುರೇನಿಯಂ ಮೂಲಗಳನ್ನು ಹುಡುಕಿ ಅಣುಶಕ್ತಿಯ ಜತೆಗೆ ಬಾಂಬ್ ತಯಾರಿಸಬಹುದು. ಈ ಹೆದರಿಕೆ ಇಂದಿಗೂ ಅಮೆರಿಕಾಕ್ಕಿದೆ, ಅದು ಭಾರತಕ್ಕೂ ಗೊತ್ತಿದೆ.

ಆಮೇಲೆ 1986ರಲ್ಲಿ ರಷ್ಯಾದಲ್ಲಾದ ಚೆರ್ನೋಬೈಲ್ ದುರಂತ, ನಾಗರಿಕ ಉಪಯೋಗಕ್ಕೆಂದು ಅಣುಶಕ್ತಿಯ ಬಳಕೆ ಮಾಡಹೊರಟರೂ ಜಾಗರೂಕತೆಯಿಲ್ಲದಿದ್ದಲ್ಲಿ ಅಪಾಯಗಳುಂಟಾಗಬಹುದೆಂದು ತೋರಿಸಿಕೊಟ್ಟಿತು. ಈ ರೀತಿಯ ಅಜಾಗರೂಕತೆಗಳಾಗದಷ್ಟು ಎಚ್ಚರ ನಮ್ಮ ಅಣುಸ್ಥಾವರಗಳಲ್ಲಿನ್ನೂ ಜಾರಿಗೆ ಬಂದಿಲ್ಲ ಎನ್ನುತ್ತಾರೆ ತಿಳಿದವರು. ಯುನಿಫಾರ್ಮ್ ಧರಿಸದೆ, ಜಾಗರೂಕತೆ ಕ್ರಮಗಳನ್ನು ಕೈಗೊಳ್ಳದೆ ಕೆಲಸಮಾಡುವುದು ಇಂದಿಗೂ ಭಾರತದ ಸ್ಥಾವರಗಳಲ್ಲಿ ನಡೆದಿದೆ. ಕಲ್ಪಾಕಂ ಅಣುಸ್ಥಾವರದಲ್ಲಿ ನೀರು ಸರಾಗವಾಗಿ ಹರಿಯದೆ ಉಷ್ಣತೆ ಏರಿದ ಪ್ರಕರಣ ಕೂಡ ಒಮ್ಮೆ ನಡೆದಿತ್ತು ಎನ್ನಲಾಗುತ್ತದೆ.

ಒಂದು ವೇಳೆ ಅಣುಬಾಂಬ್ ತಯಾರಾಗದೇ ಇದ್ದರೂ, ಅಣುಸ್ಥಾವರಗಳಲ್ಲಿ ಏನು ಸಂಭವಿಸುತ್ತಿದೆಯೆಂದು ಮಾಮೂಲಾಗಿ ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಯಾಕೆಂದರೆ ಅಣುಸ್ಥಾವರಗಳು ಅತಿಭದ್ರತೆಯ ಪ್ರದೇಶಗಳಾಗಿದ್ದು, ಸಾಮಾನ್ಯರಿಗೆ ಯಾವ ಮಾಹಿತಿಯನ್ನೂ ತೆರೆದಿಡಲಾಗುವುದಿಲ್ಲ. ಭೂಕಂಪವಾದರೆ ನೆಲ ನಡುಗುತ್ತದೆ, ನೆರೆ ಬರುವುದಿದ್ದರೆ ಸೂಚನೆ ಸಿಗುತ್ತದೆ, ಚಂಡಮಾರುತ, ಸುನಾಮಿ, ಹೀಗೆ ಏನೇ ಆಗಲಿದ್ದರೂ ಅದು ಮೊದಲೇ ತಿಳಿಯಲಿಕ್ಕೊಂದು ವ್ಯವಸ್ಥೆಯಿರುತ್ತದೆ. ಆದರೆ, ಕಣ್ಣಿಗೆ ಕಾಣದ ಅಣುವಿಕಿರಣ ಸೂಸಲು ಆರಂಭವಾಯಿತೆಂದರೆ, ವರ್ಷಗಟ್ಟಲೆ ಕಾಲ ತಿಳಿಯದಿರಬಹುದು, ಆಗಬಾರದ್ದು ಆಗಿಹೋಗಬಹುದು, ಮುಂದಿನ ಪೀಳಿಗೆಗಳು ಅದರಿಂದ ಬಾಧಿಸಲ್ಪಡಬಹುದು.

ಅಣು ಒಪ್ಪಂದವಾದ ಬೆನ್ನಲ್ಲೇ ತಾವೂ ಅಣುಸ್ಥಾವರ ಸ್ಥಾಪಿಸುತ್ತೇವೆಂದು ಮುಗಿಬಿದ್ದಿರುವ ಖಾಸಗಿ ಕಾರ್ಪೊರೇಟ್ ದಿಗ್ಗಜಗಳು, ಈಗಿರುವ ನಿಯಮಾವಳಿಗಳಲ್ಲಿ ಸೂಕ್ತ ಬದಲಾವಣೆ ತಂದು ಖಾಸಗಿಯವರಿಗೆ ಅವಕಾಶ ಕಲ್ಪಿಸಹೊರಟಿರುವ ಸರಕಾರ, ಬಾಂಬ್ ತಯಾರಿಸಲು ಅವಕಾಶವಿಲ್ಲ ಎನ್ನುವ ಒಂದೇ ಕಾರಣಕ್ಕೆ ಅಣುಒಪ್ಪಂದವನ್ನು ವಿರೋಧಿಸುತ್ತಲೇ ಬಂದಿರುವ ವಿರೋಧಪಕ್ಷ, ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಮೂಲ ನಿಲುವನ್ನು ಉಳಿಸಿಕೊಳ್ಳಲಾಗದೆ, ಸರಿ-ತಪ್ಪು ನಿರ್ಧರಿಸಲಾಗದೆ ಒದ್ದಾಡುತ್ತಿರುವ ಎಡಪಕ್ಷಗಳು - ಒಟ್ಟಿನಲ್ಲಿ ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ಚರಿತ್ರೆ ದಾಖಲಿಸಿರುವ ಕಹಿಪಾಠಗಳನ್ನು ನಾವು ಮರೆತಿರುವುದು ಸ್ಪಷ್ಟ. ಅಣುಬಾಂಬ್ ಬೇಕೋ ಬೇಡವೋ, ಅಣುಶಕ್ತಿ ಇಂದು ಎಲ್ಲರಿಗೂ ಬೇಕು, ಅದು ಜೀವವಿರೋಧಿಯೆಂಬ ಸತ್ಯವನ್ನು ಬೇಕೆಂದೇ ಮರೆತುಬಿಡಲಾಗಿದೆ.

ನಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಜಕಾರಣಿಗಳು ಮತ್ತು ಸರಕಾರಗಳು ಅಣುಶಕ್ತಿಯಿಂದಾಗಬಹುದಾದ ಎಲ್ಲಾ ರೀತಿಯ ಅನಾಹುತಗಳನ್ನು ಮನಗಾಣುವುದು ಸಾಧ್ಯವಾದಾಗ ಮಾತ್ರ, ನಮ್ಮ ನಾಳೆಗಳು ಹಾಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಇತರ ಶಕ್ತಿಮೂಲಗಳೆಡೆಗೆ ಕಣ್ಣು ಹಾಯಿಸುವಲ್ಲಿ ಇಚ್ಛಾಶಕ್ತಿ ಬೆಳೆಯುತ್ತದೆ, ಚಂದದ ನಾಳೆಗಳಿಗದು ಭಾಷ್ಯವಾಗುತ್ತದೆ. ಇದೊಂದು ಕನಸು, ಇದು ನನಸಾಗುವುದೇ?

(ಮಾಹಿತಿ ಕೃಪೆ: ಶ್ರೀ ಸತ್ಯಜಿತ್ ಕೆ.ಟಿ., ಶ್ರೀ ನಾಗೇಶ್ ಹೆಗಡೆ, ವಿಕಿಪೀಡಿಯಾ, ಗೂಗಲ್)